ಸರಳ ಸಜ್ಜನಿಕೆ ಜನನಾಯಕ ಚಾರ ಕೆ.ರತ್ನಾಕರ್ ಶೆಟ್ಟಿ ಬೆಳಗಾಂ ವಿಧಿವಶ-Times Of Karkala
ಹೆಬ್ರಿ, ಆ 25 : ಸರಳ ಸಜ್ಜನಿಕೆಯ ಜನನಾಯಕ ಹೆಬ್ರಿ ಚಾರ ಕೂತಾಡಿ ಮನೆತನದ ಕೆ. ರತ್ನಾಕರ್ ಶೆಟ್ಟಿ ಬೆಳಗಾಂ ಇಂದು (ಮಂಗಳವಾರ) ವಿಧಿವಶರಾದರು. ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಕಷ್ಟದಲ್ಲಿ ಬೆಳೆದು ಬೆಳಗಾಂನಲ್ಲಿ ತನ್ನ ಉದ್ಯಮವನ್ನು ಸ್ಥಾಪಿಸಿ, ಹಲವರಿಗೆ ಉದ್ಯೋಗದಾತರಾಗಿ ಜನಮಾನಸದಲ್ಲಿ ನೆಲೆಯಾಗಿದ್ದರು. ಬೆಳಗಾವಿಯ ಜನನಾಯಕ ಸತೀಶ್ ಜಾರಕಿಹೋಳಿ ಅವರ ಅತೀ ಆಪ್ತರಾಗಿದ್ದ ರತ್ನಾಕರ್ ಶೆಟ್ಟಿ ಅವರು ತನ್ನಿಂದ ಸಮಾಜ ಮತ್ತು ರಾಜಕೀಯ ವಾಗಿ ದೊರೆತ ಅವಕಾಶವನ್ನು ಸಮಾಜ ಸೇವೆಗಾಗಿ ಮೀಸಲಿಟ್ಟಿದ್ದರು. ಅತ್ಯಂತ ಮ್ರದು ಸ್ವಭಾವದ ಶ್ರೀ ರತ್ನಾಕರ ಶೆಟ್ಟಿಯವರು ಎಲ್ಲರಿಗೂ ಅಚ್ಚುಮೆಚ್ಚಿನ ನಾಯಕರಾಗಿದ್ದರು.
ಬೆಳಗಾವಿ ಜಿಲ್ಲಾ ಬಂಟರ ಸಂಘದ ಅಧ್ಯಕ್ಷರಾಗಿ ಸಾಕಷ್ಟು ಅಭಿವೃದ್ಧಿ ಕೆಲಸವನ್ನು ಮಾಡಿದ್ದಾರೆ. ಬೆಳಗಾಂವ ಮರ್ಚಂಟ್ಸ್ ಕೊ ಆಪ್ ಕ್ರೆಡಿಟ್ ಸೊಸಾಯಿಟಿ ಲಿ.ಬೆಳಗಾವಿ ಇದರ ಅಧ್ಯಕ್ಷರಾಗಿ, ಹೆಸ್ಕಾಮ್ ಬೆಳಗಾವಿ ಉತ್ತರದ ನಾಮ ನಿರ್ದೇಶನ ಸದಸ್ಯರಾಗಿ, ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಇದರ ಸದಸ್ಯರಾಗಿಯೂ ವಿಶೇಷವಾಗಿ ಸೇವೆ ಸಲ್ಲಿಸಿದ್ದರು. ಬೆಳಗಾವಿಯ ಹನುಮಾನ್ ನಗರದ ಮುರಳೀಧರ ಕಾಲೋನಿಯಲ್ಲಿ ವಾಸ್ತವ್ಯ ಇದ್ದರೂ ಹುಟ್ಟೂರಿನ ವ್ಯಾಮೋಹದಿಂದಾಗಿ ನಿರಂರತವಾಗಿ ಬಂದು ಹೋಗಿ ಸಂಪರ್ಕದಲ್ಲಿದ್ದರು. ಹೆಬ್ರಿ ಚಾರ ಕಜ್ಕೆಯ ಪರಿಸರದ ಒಳ್ಳೇಯ ಕೆಲಸಗಳಲ್ಲಿ ತನ್ನ ಪಾಲಿನ ಸಹಾಯ ಮಾಡಿದ್ದರು.ಅಪಾರ ದೈವಭಕ್ತರಾದ ರತ್ನಾಕರ ಶೆಟ್ಟಿಯವರು ಚಾರದಲ್ಲಿ ಆಂಜನೇಯ ದೇವಸ್ಥಾನದ ಅಭಿವೃದ್ಧಿ ಕನಸು ಕಂಡು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿ ಎಲ್ಲರ ಸಹಕಾರದಿಂದ ಆಂಜನೇಯ ದೇವಸ್ಥಾನವನ್ನು ಜೀಣೋದ್ಧಾರ ಮಾಡಿಸಿ ಲೋಕಾರ್ಪಣೆ ಮಾಡಿಸಿದ್ದಾರೆ. ರತ್ನಾಕರ ಶೆಟ್ಟಿಯವರ ಅವರ ಜನಸೇವೆ ಮೆಚ್ಚಿ ನೂರಾರು ಪ್ರಶಸ್ತಿ ಗೌರವಗಳು ಕೂಡ ಅವರಿಗೆ ಸಂದಿವೆ. ದೇವರ ಸೇವೆ ಅದು ಒಂದು ದೊಡ್ಡ ಸಂಕಲ್ಪ ಎಂದು ಸದಾ ಹೇಳಿಕೊಳ್ಳುತ್ತಿದ್ದರು. ಮೃತರು ಪತ್ನಿ, ನಾಲ್ವರು ಗಂಡು ಮಕ್ಕಳು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
Post a comment