ಉಡುಪಿ,ಸೆ.7: ಮಲ್ಪೆ ಕೊಡವೂರಿನ ಜುಮಾದಿನಗರ ಬಸ್ ನಿಲ್ದಾಣದಲ್ಲಿ ದಿಕ್ಕು ತೋಚದೆ ಏಕಾಂಗಿಯಾಗಿ ಕುಳಿತಿದ್ದ ಅಪ್ರಾಪ್ತ ವಯಸ್ಸಿನ ಬಾಲಕನನ್ನು ಮೆಸ್ಕಾಂ ಸಿಬ್ಬಂದಿ ರವಿ ಕೊಡವೂರ್ ರಕ್ಷಿಸಿದ್ದಾರೆ.
ಒಂಭತ್ತು ವರ್ಷದ ಬಾಲಕನೋರ್ವ ಜುಮಾದಿನಗರ ಬಸ್ ನಿಲ್ದಾಣದ ಬಳಿ ಏಕಾಂಗಿಯಾಗಿ ಕುಳಿತಿರುವುದನ್ನು ಕಂಡ ರವಿ, ಕೂಡಲೇ ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಜಿಲ್ಲಾ ಮಕ್ಕಳ ಘಟಕದ ಸದಸ್ಯರು ಹುಡುಗನ ವಿಚಾರಣೆ ನಡೆಸಿದಾಗ ಬಾಲಕ ತನ್ನ ಹೆಸರನ್ನು ಮಾತ್ರ ಹೇಳುತ್ತಿದ್ದ. ಬಾಲಕನಿಗೆ ತಾತ್ಕಾಲಿಕ ಆಶ್ರಯದ ವ್ಯವಸ್ಥೆ ಮಾಡಲು ಸಜ್ಜಾಗಿದ್ದ ಮಹಿಳಾ ಪೊಲೀಸರಿಗೆ ಮಕ್ಕಳ ರಕ್ಷಣಾ ಘಟಕ ಮಾಹಿತಿ ನೀಡಿತ್ತು. ಇದೇ ವೇಳೆ ತಾಯಿಯೊಬ್ಬರು ಪೊಲೀಸ್ ಠಾಣೆಗೆ ಬಂದಿದ್ದು, ತನ್ನ ಮಗನನ್ನು ಕಳೆದುಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.
ಮಹಿಳೆ ಬಸ್ ನಿಲ್ದಾಣದಲ್ಲಿ ಕುಳಿತಿದ್ದ ಬಾಲಕನ ತಾಯಿ ಎಂದು ಪರಿಶೀಲನೆಯ ನಂತರ ತಿಳಿದಿದ್ದು, ಮಹಿಳಾ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ವೈಲೆಟ್ ಫೆಮಿನಾ ಉಪಸ್ಥಿತಿಯಲ್ಲಿ ಬಾಲಕನ್ನು ಆತನ ತಾಯಿಗೆ ಒಪ್ಪಿಸಿದ್ದಾರೆ.
Post a comment