ಹೆಬ್ರಿ,ಅ.17: ದೈವರಾಧಕರ ಸಂಘಟನೆ ಇನ್ನಷ್ಟು ಬಲಗೊಳ್ಳಬೇಕಿದೆ, ಅತೀ ಹೆಚ್ಚು ಸದಸ್ಯರಾಗುವ ಮೂಲಕ ಸಂಘಟನೆಯ ಬಲವರ್ಧನೆಗೆ ಎಲ್ಲರೂ ಕೈಜೋಡಿಸಿ, ದೈವದ ಸೇವಕರ ಜೊತೆ ತಾನು ನಿರಂತರ ಇರುವುದಾಗಿ ಅಖಿಲ ಭಾರತ ತುಳುನಾಡ ದೈವರಾಧಕರ ಒಕ್ಕೂಟ ಉಡುಪಿ ಜಿಲ್ಲೆ ಹೆಬ್ರಿ ಘಟಕದ ಅಧ್ಯಕ್ಷ ಮುದ್ರಾಡಿ ಸುಕುಮಾರ್ ಪೂಜಾರಿ ಹೇಳಿದರು.
![]() |
ಹೆಬ್ರಿ ಘಟಕದ ಮಾಧ್ಯಮ ಸಂಚಾಲಕರಾಗಿ ನೇಮಕಗೊಂಡ ಪತ್ರಕರ್ತ ಸುಕುಮಾರ್ ಮುನಿಯಾಲ್ ಅವರನ್ನು ಗೌರವಿಸಲಾಯಿತು. |
ಅವರು ಶಿವಪುರ ಕೆರೆಬೆಟ್ಟು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ನಡೆದ ಅಖಿಲ ಭಾರತ ತುಳುನಾಡ ದೈವರಾಧಕರ ಒಕ್ಕೂಟ ಉಡುಪಿ ಜಿಲ್ಲೆ ಹೆಬ್ರಿ ಘಟಕದ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗೌರವ ಸಲಹೆಗಾರರಾದ ಮಂಡಾಡಿಜಡ್ಡು ಅಣ್ಣಪ್ಪ ಕುಲಾಲ್ ಮಾತನಾಡಿ ದೈವರಾಧಕರು ಮತ್ತು ಚಾಕರಿಯವರ ಸಮಸ್ಯೆಗಳು ಸಂಘಟಮೆಯ ಬಲವರ್ಧನೆಯ ಮೂಲಕ ಸರಿಯಾಗಬೇಕಿದೆ, ದೈವರಾಧಕರ ಸಹಕಾರಿ ಒಕ್ಕೂಟ ಎಲ್ಲರಿಗೂ ಮಾದರಿಯಾಗಲಿ ಎಂದು ಶುಭಹಾರೈಸಿದರು. ಅಖಿಲ ಭಾರತ ತುಳುನಾಡ ದೈವರಾಧಕರ ಒಕ್ಕೂಟ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿನೋದ್ ಶೆಟ್ಟಿ ಮಾರ್ಗದರ್ಶನ ನೀಡಿದರು.
ಅಖಿಲ ಭಾರತ ತುಳುನಾಡ ದೈವರಾಧಕರ ಒಕ್ಕೂಟದ ಹೆಬ್ರಿ ಘಟಕದ ಗೌರವ ಅಧ್ಯಕ್ಷ ಗಂಗ ಪಾಣಾರ ಆರ್ಡಿ, ನಂದಿ ಪೂಜಾರಿ ಅಮಾವಾಸ್ಯೆಬೈಲು, ಹೆಬ್ರಿ ಘಟಕದ ಪ್ರಮುಖರು, ಹಿರಿಯರು, ದೈವ ಚಾಕ್ರಿಯವರು, ಉಪಾಧ್ಯಕ್ಷ ನರಸಿಂಹ ಪರವ, ಪ್ರಧಾನ ಕಾರ್ಯದರ್ಶಿ ಅಣ್ಣಿ ಪಾಣಾರ, ಅರುಣ್ ಪೂಜಾರಿ, ಪ್ರವೀಣ್ ಶಿವಪುರ, ಸಂತೋಷ ಪಾಣಾರ ಆರ್ಡಿ ಮುಂತಾದವರು ಉಪಸ್ಥಿತರಿದ್ದರು. ಅರುಣ್ ಪೂಜಾರಿ ನಿರೂಪಿಸಿ ಪ್ರವೀಣ್ ಸ್ವಾಗತಿಸಿ ಅಣ್ಣಿ ಪಾಣಾರ ವರದಿ ಮಂಡಿಸಿ ಸಂಸ್ಥೆಯ ಸಾಧನೆಯ ವಿವರ ನೀಡಿದರು. ಸಂತೋಷ ವಂದಿಸಿದರು.
Post a comment